Chitradurga news|Nammajana.com|15-8-2025
ನಮ್ಮ ಜನ.ಕಾಂ, ಚಿತ್ರದುರ್ಗ: ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ನಗರದ ಅಭಿವೃದ್ಧಿಯ ದೃಷ್ಟಿಯಿಂದ ಚಿತ್ರದುರ್ಗ (Chitradurga Development) ನಗರದ ಪ್ರಮುಖ ರಸ್ತೆ ಅಗಲೀಕರಣ, ಮೆಡಿಕಲ್ ಕಾಲೇಜು ನೂತನ ಡಿಸಿ ಆಫೀಸ್ ಕಟ್ಟಡಕ್ಕೆ ಸ್ಥಳಾಂತರ, ಹೊಸ ಸ್ಥಳದಲ್ಲಿ ನೂತನ ಡಿಸಿ ಆಫೀಸ್ ನಿರ್ಮಾಣ ಕಾರ್ಯಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಕಾಲಮಿತಿಯೊಳಗೆ ಎಲ್ಲ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಧಿಕಾರಿಗಳೊಂದಿಗಿನ ಪ್ರಮುಖ ವಿವಿಧ ವಿಷಯಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದಿಂದ ಬಹುದೂರದಲ್ಲಿ ಡಿಸಿ ಕಚೇರಿ ನಿರ್ಮಾಣದಿಂದ ಸಾರ್ವಜನಿಕರಿಗೆ ತೊಂದರೆ
ನಗರದಿಂದ ಬಹುದೂರದಲ್ಲಿ, ಕುಂಚಿಗನಾಳ್ ಸಮೀಪ ಪ್ರಸ್ತುತ ಹೊಸ ಡಿ.ಸಿ. ಆಫೀಸ್ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ಅನನುಕೂಲವಾಗಲಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಸಾರ್ವಜನಿಕರು ಬಂದು ಹೋಗಲು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ, ಈ ಬಗ್ಗೆ (Chitradurga Development) ಸಾರ್ವಜನಿಕರು, ವಿವಿಧ ಸಂಘಟನೆಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಜಿಲ್ಲೆಯ ಎಲ್ಲ ಶಾಸಕರು ಕಳೆದ ತಿಂಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ, ಅವರು ಕೂಡ, ಈ ಕಟ್ಟಡಕ್ಕೆ ಮೆಡಿಕಲ್ ಕಾಲೇಜಿಗೆ ಸ್ಥಳಾಂತರ ಮಾಡಲು ಸಮ್ಮತಿ ಸೂಚಿಸಿದ್ದಾರೆ ಎಂದರು.
ನೂತನ ಡಿಸಿ ಕಚೇರಿಯನ್ನು ಯಾವುದಕ್ಕೆ ಬಳಸಬೇಕು ಎಂಬುದು ಸಭೆ ನಡೆಸಿ ತಿರ್ಮಾನ
ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ನರ್ಸಿಂಗ್, ಪ್ಯಾರಾ ಮೆಡಿಕಲ್, ಅಲೈಡ್ ಹೆಲ್ತ್ ಸೈನ್ಸ್, ಆಡಳಿತ ವಿಭಾಗಗಳ ಪೈಕಿ ಯಾವುದನ್ನು ಇಲ್ಲಿಗೆ ಸ್ಥಳಾಂತರಿಸಬಹುದು, ಕಟ್ಟಡದ ವಿನ್ಯಾಸದಲ್ಲಿ ಯಾವ ಸಣ್ಣ ಪುಟ್ಟ ಬದಲಾವಣೆ ಕೈಗೊಳ್ಳಬೇಕು ಎಂಬುದರ ಸಾಧ್ಯಾಸಾಧ್ಯತೆಗಳ ಬಗ್ಗೆ, ಚರ್ಚೆ ನಡೆಸಿದ ಸಚಿವರು, ಈ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ಶೀಘ್ರದಲ್ಲಿಯೇ ಕಂದಾಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು, ಈ ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲು ದಿನಾಂಕ ನಿಗದಿಪಡಿಸುವಂತೆ ಹಾಗೂ ಸಭೆಯಲ್ಲಿ (Chitradurga Development) ಚರ್ಚಿಸಬೇಕಿರುವ ವಿಷಯಗಳಿಗೆ ಪೂರಕವಾಗಿ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.
ಮೆಡಿಕಲ್ ಕಾಲೇಜನ್ನು ಹೊಸದಾಗಿ ನಿರ್ಮಿಸಲಾಗುತ್ತಿರುವ ಡಿಸಿ ಆಫೀಸ್ ಕಟ್ಟಡಕ್ಕೆ ಸ್ಥಳಾಂತರ ಮಾಡಿದಲ್ಲಿ, ನಗರದ ಒಳಗೆ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ಡಿ.ಸಿ. ಆಪೀಸ್ ನಿರ್ಮಾಣ ಮಾಡಲು, ಜಿಲ್ಲಾಧಿಕಾರಿಗಳ ವಸತಿ ಗೃಹದ ಹಿಂಭಾಗ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ ವಸತಿಗೃಹಗಳ ಜಾಗ ಹಾಗೂ ಅಕ್ಕಪಕ್ಕದಲ್ಲಿ ಲಭ್ಯವಾಗುವ ಸ್ಥಳವನ್ನು ಬಳಸಿಕೊಳ್ಳುವುದರ ಬಗ್ಗೆ ಇದೇ ಸಂದರ್ಭದಲ್ಲಿ ಚರ್ಚೆ ನಡೆಸಲಾಯಿತು.
ರಸ್ತೆ ಅಗಲೀಕರಣಕ್ಕೆ ಬದ್ದ
ಚಿತ್ರದುರ್ಗ ನಗರದ ಪ್ರಮುಖ ರಸ್ತೆಯನ್ನು ಎರಡು ಹಂತಗಳಲ್ಲಿ ಅಗಲೀಕರಣಗೊಳಿಸುವ ಕಾರ್ಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು, ರಸ್ತೆ ಅಗಲೀಕರಣಕ್ಕಾಗಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಪ್ರವಾಸಿ ಮಂದಿರ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೊದಲ ಹಂತ ಹಾಗೂ ಗಾಂಧಿ ವೃತ್ತದಿಂದ ಕನಕ ವೃತ್ತದವರೆಗೆ ಎರಡನೆ ಹಂತದಲ್ಲಿ ರಸ್ತೆಯ ಮಧ್ಯ ಭಾಗದಿಂದ ಕನಿಷ್ಟ 25 ಮೀ. ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ. ಈ ಭಾಗದಲ್ಲಿ ಬರುವ ಅಂದಾಜು 400 ಕ್ಕೂ ಹೆಚ್ಚು ವಾಣಿಜ್ಯ ಆಸ್ತಿಗಳು ಹಾಗೂ ಇತರೆ ಆಸ್ತಿಗಳ ಪ್ರತಿಯೊಂದು ಕಡತವನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ ರಸ್ತೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳು, ಟ್ರೇಡ್ ಲೈಸೆನ್ಸ್ ಉಲ್ಲಂಘನೆ ಸೇರಿದಂತೆ ಹಲವು ನಿಯಮಗಳ (Chitradurga Development) ಉಲ್ಲಂಘನೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ನಿಯಮಗಳ ಉಲ್ಲಂಘನೆ ಮಾಡಿರುವ ಕಟ್ಟಡಗಳನ್ನು ಗುರುತಿಸಿ, ಅಂತಹವುಗಳನ್ನು ತ್ವರಿತವಾಗಿ ತೆರವುಗೊಳಿಸಿ, ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ನಗರದಲ್ಲಿ ಸಂಚಾರ ದಟ್ಟಣೆ, ವಾಹನಗಳ ಓಡಾಟಕ್ಕೆ ಇರುವ ಸಮಸ್ಯೆ, ಫುಟ್ಪಾತ್, ಒಳಚರಂಡಿ ವ್ಯವಸ್ಥೆ, ಪಾರ್ಕಿಂಗ್ ಮುಂತಾದ ಸಮಸ್ಯೆಗಳು ಇಲ್ಲಿನ ಪ್ರಮುಖ ರಸ್ತೆಯಲ್ಲಿ ಇದ್ದು, ನಗರದ ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆ ಅಗಲೀಕರಣ ಆಗಲೇಬೇಕು ಎಂದು ಸಚಿವರು ಸೂಚನೆ ನೀಡಿದರು.
ಇದನ್ನೂ ಓದಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಣೆ: Krantiveer Sangolli Rayanna
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಪಾಲ್ಗೊಂಡು, ಡಿಸಿ ಆಫೀಸ್ ಕಟ್ಟಡಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ, ನಗರದ ರಸ್ತೆ ಅಗಲೀಕರಣ, ಹೊಸದಾಗಿ ಡಿ.ಸಿ. ಆಫೀಸ್ ನಿರ್ಮಾಣ ವಿಚಾರವಾಗಿ ಹಲವು ಸಲಹೆ ಸೂಚನೆಗಳನ್ನು ನೀಡಿ, ಜಿಲ್ಲಾ ಉಸ್ತುವಾರಿ ಸಚಿವರು ಕೈಗೊಂಡಿರುವ ನಿರ್ಧಾರಗಳು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಉತ್ತಮವಾಗಿವೆ. ಹೀಗಾಗಿ ಇದನ್ನು ಕಾರ್ಯಗತಗೊಳಿಸಲು ಬೆಂಬಲ ನೀಡುವುದಾಗಿ ಹೇಳಿದರು.
ಇದನ್ನೂ ಓದಿ: ವಾರ್ತಾ ಇಲಾಖೆಗೆ ಪತ್ರಕರ್ತರ ವಾಹನ ಹಸ್ತಾಂತರ : Journalists’ vehicle
ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಸಿಇಒ ಡಾ. ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಡಿಯುಡಿಸಿ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252