
Chitradurga news|Nammajana.com|29-6-2025
ನಮ್ಮಜನ.ಕಾಂ, ಹೊಸದುರ್ಗ: ಭದ್ರಾ ಜಲಾಶಯದಿಂದ ನೀರು ತರಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಶೇ. 80 ರಷ್ಟು ಕಾಮಗಾರಿಯೇ ಮುಗಿದಿದೆ. ಆದರೀಗ ಬಲದಂಡೆಯಿಂದ ನೀರು ತರಲು ದಾವಣಗೆರೆ ರೈತರು ಹಾಗೂ ಮುಖಂಡರು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಇದು ಹೀಗೆ (HOSADURGA Bhadra) ಮುಂದುವರಿದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಹೊಸದುರ್ಗಕ್ಕೆ ನೀರು ಬಾರದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ಬಲದಂಡೆಯಿಂದ ನೀರು ತರುವುದಕ್ಕೆ ಕೆಲವರು ಅಡ್ಡಿ ಪಡಿಸುತ್ತಿರುವುದು ಸರಿಯಲ್ಲವೆಂದು ಖಂಡಿಸಿ, ಶನಿವಾರ ನಡೆದ ಬಂದ್ ನಿಮಿತ್ತವಾಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು.

ಈ ಹಿಂದೆ 2013 ರಲ್ಲಿ ಹೊಸದುರ್ಗ ಕುಡಿಯುವ ನೀರನ್ನು ಪರಿಶೀಲಿಸಿದ ಅಧಿಕಾರಿಗಳು, ಈ ನೀರಿನಲ್ಲಿ ಉಪ್ಪಿನ ಅಂಶ ಹಾಗೂ ಫ್ಲೋರೈಡ್ ಅಂಶ ಅಧಿಕವಾಗಿರುವುದರಿಂದ ಕುಡಿಯಲು ಯೋಗ್ಯವಲ್ಲ ಎಂಬ ವರದಿ ನೀಡಿದ್ದರು. ಹಾಗಾಗಿ, ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲು 830 ರೂ.ಕೋಟಿ ಮೀಸಲಿಡಲಾಗಿದೆ. ಐಐಟಿ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ (HOSADURGA Bhadra) ಸಕಾರಾತ್ಮಕವಾಗಿ ವರದಿ ಸಲ್ಲಿಸಿದ್ದು, ದಾವಣಗೆರೆಯವರು ಒಮ್ಮೆ ಪರಿಶೀಲಿಸಬೇಕು. ಬಲದಂಡೆಯಿಂದ ಹೊಸದುರ್ಗದವರು ನೀರು ಪಡೆದರೆ, ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ ಕೆಲವು ಮುಖಂಡರು ಮತ್ತು ರೈತರು ಹೊಸದುರ್ಗಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲವೆಂದು ಕ್ಯಾತೆ ತೆಗೆದಿದ್ದಾರೆ. 21 ನಾಲೆಯಲ್ಲಿ ಬೇರೆ ಜಿಲ್ಲೆಗಳ ಜನರಿಗೆ ಕುಡಿಯಲು ನೀರು ಹೋಗುತ್ತಿದ್ದು, ನಮ್ಮನ್ನು ಪ್ರಶ್ನಿಸುವವರು, ಅವರನ್ನೇಕೆ ಪ್ರಶ್ನೆ ಮಾಡುತ್ತಿಲ್ಲ? ಬೇರೆ ಕಡೆಗೆ ನೀರು ಕೊಡುವಾಗ ಏಕೆ ಸುಮ್ಮನಿದ್ದರು. ಭಾರತೀಯ ವಿಜ್ಞಾನ ಸಂಸ್ಥೆ ಈಗಾಗಲೇ ಡ್ಯಾಂಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹೋರಾಟ ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ನಾವು ನಮ್ಮ ತಾಲ್ಲೂಕಿನ ಜನತೆಗೆ ಕುಡಿಯುವ ನೀರು ಪೂರೈಸಲು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಮಹಾರಾಜರ ಅವಧಿಯಲ್ಲಿ ನಿರ್ಮಾಣವಾದ ವಾಣಿವಿಲಾಸ ಸಾಗರದಲ್ಲಿ ಹೊಸದುರ್ಗ ತಾಲೂಕಿನ ರೈತರ ಬಹುತೇಕ ಜಮೀನುಗಳು ಮುಳುಗಡೆಯಾಗಿದ್ದವು. ಈ ರೈತರು ಇಂದಿಗೂ ಇದರ ಉಪಯೋಗ ಪಡೆದುಕೊಂಡಿಲ್ಲ, ಹಿರಿಯೂರಿನ ತಾಲೂಕಿನ ರೈತರಿಗೆ ಎಂದಿಗೂ ತೊಂದರೆ ನೀಡಿಲ್ಲ, ದಾವಣಗೆರೆಯಲ್ಲಿ ಭದ್ರಾ ಮೇಲ್ದಂಡೆ. ವಿಚಾರವಾಗಿ ಕೆಲ ನಿರುದ್ಯೋಗಿ ರಾಜಕಾರಣಿಗಳು ರೈತರ ಸೋಗಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಭದ್ರಾ ನೀರನ್ನು ಬಳಕೆ ಮಾಡಿಕೊಳ್ಳಬೇಡಿ. ಇಡೀ ಒಂದು ತಾಲ್ಲೂಕು ವ್ಯಥೆ ಪಡುವಂತೆ ಮಾಡಬೇಡಿ. ನಿಮ್ಮಗಳ ಕ್ಷೇತ್ರದಲ್ಲಿದ್ದು ಸೇವೆ ಮಾಡಿ, ಜನರ ವಿಶ್ವಾಸ ಪಡೆಯಿರಿ. ಸ್ವಂತ ಲಾಭಕ್ಕಾಗಿ ಕುಡಿಯುವ ನೀರನ್ನು ತಡೆಹಿಡಿಯಬೇಡಿ.ಈ ಯೋಜನೆ ದಾರಿತಪ್ಪಿದರೆ ಉಗ್ರ ಹೋರಾಟ ಮಾಡಿ, ನೀರನ್ನು ತಂದೆ ತರುತ್ತೇವೆ ಎಂದು ಹೇಳಿದರು.
ನಗರದ ವೀರಭದ್ರೇಶ್ವರ ಸ್ವಾಮಿ ದೇವಾಲಯದಿಂದ ಆರಂಭವಾದ ಪ್ರತಿಭಟನೆ ಮದಕರಿ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತದ ಮಾರ್ಗವಾಗಿ ಟಿ.ಬಿ. ವೃತ್ತದ ಮೂಲಕ ಸಂಚರಿಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಬೆಳಗ್ಗೆಯಿಂದಲೇ ನಗರದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಇಡೀ ದಿನ ಬಾಗಿಲು ತೆರೆಯದೆ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಇದೇ ವೇಳೆ ಉದ್ಯಮಿ ಸದ್ಗುರು ಪ್ರದೀಪ್, ರೈತ ಸಂಘದ ಅಧ್ಯಕ್ಷ ಚಿತ್ತಪ್ಪ, ನೀರಾವರಿ ಹೋರಾಟಗಾರ ಚಿಕ್ಕಪ್ಪನಹಳ್ಳಿ ಷಣ್ಮುಖ, ಕೆಪಿಸಿಸಿ ಸದಸ್ಯರುಗಳಾದ ಎಂ.ಪಿ.ಶಂಕರ್, ಅಲ್ತಾಫ್ ಪಾಷಾ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್ ಮೂರ್ತಿ, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಆಸಂದಿ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಗಿರಿಜಾ ಆಚಾರ್, ಮುಖಂಡರುಗಳಾದ ಕೆ.ಎಸ್.ಕಲ್ಮಠ್, ಗೋ ತಿಪ್ಪೇಶ್, ಗೂಳಿಹಟ್ಟಿ ಕೃಷ್ಣಮೂರ್ತಿ, ಸಿಂಧು ಅಶೋಕ್, ಜಗದೀಶ್ ನಾಯಿಗೆರೆ, ಬೋಕಿಕೆರೆ ನಾಗರಾಜ್, ಬಸವರಾಜ್ ಕೆ. ಅನಂತ್, ಬುರುಡೇಕಟ್ಟೆ ರಾಜೇಶ್, ಹೆಬ್ಬಳ್ಳಿ ಮಲ್ಲಿಕಾರ್ಜುನ್, ವಾಲ್ಮೀಕಿ ರವಿತೇಜ, ಲಿಂಗದೇವರು, ಲಕ್ಕಿಗುರು, ರೈತ ಸಂಘ, (HOSADURGA Bhadra) ಮಹಿಳಾ ಸಂಘ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸೇರಿದಂತೆ ಸಾವಿರಾರು ಜನರಿದ್ದರು ಸೇರಿದ್ದರು.
ಬಾಕ್ಸ್
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 830 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಈಗಾಗಲೇ ಕಾಮಗಾರಿಗೆ ಶೇ.80 ರಷ್ಟು ಸರ್ಕಾರದ ಹಣವನ್ನು ಯೋಜನೆಗೆ ವ್ಯಯಿಸಲಾಗಿದೆ. ಈ ಯೋಜನೆ ಮುಗಿಯುವ ಹಂತಕ್ಕೆ ಬಂದಿರುವ ಸಮಯದಲ್ಲಿ ವಿರೋಧಿಸುವ ದಾವಣಗೆರೆ ಮುಖಂಡರು, ಈ ಯೋಜನೆಗೆ ಚಾಲನೆ ನೀಡಿದಾಗ ನೀವು ನಿದ್ದೆ ಮಾಡುತ್ತಿದ್ದಿರಾ? ಒಂದು ಕಡೆ 20 ಕಿಲೋ ಮೀಟರ್ಗೊಂದು ಡ್ಯಾಂ ಮತ್ತು ಇನ್ನೊಂದು ಕಡೆ 70 ಕಿಲೊಮೀಟರ್ಗೊಂದು ಡ್ಯಾಂ ಮಧ್ಯೆ ಇರುವ ನಾವುಗಳು ಇದುವರೆಗೂ ನೀರನ್ನು ಪಡೆಯಲಾಗಿಲ್ಲ. ಇದುವರೆಗೂ ನಮಗೆ ನೀರು ಸಿಕ್ಕಿಲ್ಲ. ಇದು ಯಾವ ನ್ಯಾಯ? ನಾವೇನೂ ಪಾಪ ಮಾಡಿದ್ದೇವೆ? ದಾವಣಗೆರೆಯವರು ಜಮೀನುಗಳಿಗೆ ಹಾಗೂ ಕುಡಿಯಲು ನೀರು ಪಡೆದಿದ್ದೀರಿ. ಆದರೆ, ಈಗ ನಮಗ್ಯಾಕೆ ವಿರೋಧ ಮಾಡುತ್ತಿದ್ದೀರಿ? ನಾವು ಇದನ್ನು ಉಗ್ರವಾಗಿ ವಿರೋಧಿಸುತ್ತೇವೆ.
ಎಸ್.ಲಿಂಗಮೂರ್ತಿ
ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಖನಿಜ ನಿಗಮ, ಬೆಂಗಳೂರು