Chitradurga News | Nammajana.com | 15-08-2025
ನಮ್ಮಜನ ನ್ಯೂಸ್ ಕಾಂ, ಚಿತ್ರದುರ್ಗ: ದೇಶದ (Independence Day) ಇತಿಹಾಸದಲ್ಲಿಯೇ ಮೊದಲು ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ನಿರ್ಗತಿಕರು, ಬಡವರು, ಕೆಳವರ್ಗದವರು, ಸಮಾಜದ ಅಂಚಿನಲ್ಲಿರುವವರು ಹಾಗೂ ಮಹಿಳೆಯರ ಆರ್ಥಿಕವಾಗಿ ಸಬಲೀಕರಣಕ್ಕೆ ಸಹಾಯಕವಾಗಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಇದನ್ನೂ ಓದಿ: ಶ್ರೀ ಅಹೋಬಲ ಟಿವಿಎಸ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಧ್ವಜರೋಹಣ ನೇರವೇರಿಸಿದ TVS ಸಿಇಒ ಪಿ.ವಿ.ಅರುಣ್

ನಗರದ ವಿಜ್ಞಾನ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾದ 79ನೇ ಸ್ವಾತಂತ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿಗಳು ಪ್ರತಿಯೊಬ್ಬರು ಸಮಾಜದಲ್ಲಿ ಘನತೆಯಿಂದ ಬದುಕಲು ದಾರಿ ಮಾಡಿಕೊಟ್ಟಿವೆ. ರಾಷ್ಟ್ರಕವಿ ಕುವೆಂಪು ಅವರ “ಬಡತನವ ಬುಡಮಟ್ಟ ಕೀಳಬನ್ನಿ” ಎನ್ನುವ ಆಶಯವನ್ನು ಸಾಕರಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ. ಬಡತನ ನಿವಾರಣೆ, ಉದ್ಯೋಗ ಅವಕಾಶ ಹೆಚ್ಚಿಸಲು ಪ್ರನಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿ ಮಾಡಿ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿಯೋಜನೆ, ಗೃಹಜ್ಯೋತಿ, ಯುನಿಧಿ ಯೋಜನೆಗಳು ರಾಜ್ಯಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.ಅನ್ನಭಾಗ್ಯ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಅಂತ್ಯೋದಯ ಮತ್ತು ಬಿ.ಪಿ.ಎಲ್. ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ರೂ.170/- ರಂತೆ ಡಿ.ಬಿ.ಟಿ ಮೂಲಕ ಜುಲೈ 2023 ರಿಂದು ಡಿಸೆಂಬರ್-2024 ರವರೆಗೆ ಒಟ್ಟು ರೂ.370.01 ಕೋಟಿ ಹಣವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗಿದೆ.
ಜೊತೆಗೆ ಪ್ರತಿ ಸದಸ್ಯರಿಗೆ ಡಿ.ಬಿ.ಟಿ ಹಣದ ಬದಲಾಗಿ ಫೆಬ್ರವರಿ-2025ರ ಮಾಹೆಯಿಂದ ಪ್ರತಿ ಫಲಾನುಭವಿಗಳಿಗೆ ಹೆಚ್ಚುವರಿ 05 ಕೆ.ಜಿ ಯಂತೆ ಪ್ರತಿ ಮಾಹೆಗೆ 6313 ಮೆಟ್ರಿಕ್ ಟನ್ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಇಂದಿನ ಚಿನ್ನದ ಬೆಲೆ ಎಷ್ಟಿದೆ
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,78,367 ಫಲಾನುಭವಿಗಳಿದ್ದು, ಈವರೆಗೆ ಒಟ್ಟು ರೂ.343.87 ಕೋಟಿ ವ್ಯಯ ಮಾಡಲಾಗಿದೆ. ಮಹಿಳೆಯರ ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಮೇ 2025ರ ಅಂತ್ಯದವರೆಗೆ ಒಟ್ಟು 3,87,490 ಫಲಾನುಭವಿಗಳಿಗೆ ರೂ.1,398 ಕೋಟಿ ರೂಪಾಯಿಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ.
ಈ ಗೃಹಲಕ್ಷ್ಮಿ ಯೋಜನೆಯನ್ನು(Independence Day) ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಿಸಿದ ಫಲವಾಗಿ ಜಿಲ್ಲೆಯಲ್ಲಿ 28 ಜನ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಯುವನಿಧಿ ಯೋಜನೆಯಡಿಯಲ್ಲಿ ಜನವರಿ 2024 ರಿಂದ ಮೇ-2025ರವರೆಗೆ ಒಟ್ಟು ರೂ.15 ಕೋಟಿ ಯುವ-ನಿರುದ್ಯೋಗಿಗಳ ಖಾತೆಗೆ ನೇರಪಾವತಿ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲಾ ವಿಭಾಗದ ಸರ್ಕಾರಿ ಬಸ್ಗಳಲ್ಲಿ 5 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದಾರೆ. ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು ರೂ. 208 ಕೋಟಿ ರೂಪಾಯಿ ಖರ್ಚುಮಾಡಲಾಗಿದೆ ಎಂದು ಸಚಿವ ಡಿ.ಸುಧಾಕರ್ ಮಾಹಿತಿ ನೀಡಿದರು.
ಶೀಘ್ರ 296 ಕಂದಾಯ ಗ್ರಾಮ ಘೋಷಣೆ: ಹಕ್ಕು ಪತ್ರಗಳ ವಿತರಣೆ
ಜಿಲ್ಲೆಯಲ್ಲಿ ಜನವಸತಿ ಇರುವ 296 ಗ್ರಾಮಗಳಿಗೆ ಕಂದಾಯ ಗ್ರಾಮದ ಮಾನ್ಯತೆ ನೀಡಲು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗುವುದು. ಈಗಾಗಲೇ 5174 ಫಲಾನುಭವಿಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ 7976 ಹಕ್ಕು ಪತ್ರಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ.
ಇದನ್ನೂ ಓದಿ: ಸಹೋದರ ಸಮುದಾಯದ ಕೆಲವು ನಾಯಕರಿಂದ ಗೊಂದಲ: ಮಾದಾರ ಚನ್ನಯ್ಯ ಶ್ರೀ
ಮಹತ್ವಾಂಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆಯು ಸಾಕಾರಗೊಳ್ಳುವ ದಿನಗಳು ಸಮೀಪಿಸುತ್ತಿವೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸುವಂತೆ ಈಗಾಗಲೇ ಶಿಫಾರಸ್ಸು ಮಾಡಲಾಗಿರುತ್ತದೆ. ಈ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕುಗಳಡಿಯಲ್ಲಿನ ಒಟ್ಟು 73,946 ಹೆಕ್ಟೇರ್ ಪ್ರದೇಶಕ್ಕೆ ಹನಿನೀರಾವರಿ ಮೂಲಕ ನೀರೊದಗಿಸಲು ಹಾಗೂ 86 ಕೆರೆಗಳಿಗೆ ಕುಡಿಯುವ ನೀರು ಪೂರೈಸಲು ರೂ. 2677 ಕೋಟಿಗಳ ವೆಚ್ಚದಲ್ಲಿ 06 ಪ್ಯಾಕೇಜ್ಗಳಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ.
ಮುಂದಿನ ದಿನಗಳಲ್ಲಿ ಬರದ ನಾಡು ಚಿತ್ರದುರ್ಗ ಕೃಷಿಯ ನಾಡಾಗಿ ಬದಲಾಗಿಸಲು ನಮ್ಮ ಸರ್ಕಾರ ಕಂಕಣಬದ್ಧವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ಅದರಲ್ಲೂ ಗ್ರಾಮೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ವಿದ್ಯಾಭ್ಯಾಸಕ್ಕೆ ಆದ್ಯತೆಯನ್ನು ನೀಡುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲ ಚೇತನ ಮಾಶಾಸನ ಜೊತೆಗೆ ಮಾತೃಪೂರ್ಣ ಯೋಜನೆ, ಪೋಷಣೆ ಅಭಿಯಾನ ಯೋಜನೆ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಸ್ವಾಧಾರ ಯೋಜನೆ, ಸಾಂತ್ವನ ಯೋಜನೆಗಳ ಮುಖಾಂತರ ಎಲ್ಲ ವರ್ಗದವರ ಏಳಿಗೆಗಾಗಿ ನಮ್ಮ ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಇದೇ ವೇಳೆ ಸಚಿವ ಡಿ.ಸುಧಾಕರ್ ತುರವನೂರು ಗ್ರಾಮದಲ್ಲಿ ನಡೆದ ಈಚಲು ಮರದ ಸತ್ಯಾಗ್ರಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಮಹನೀಯರ ಕೊಡಿಗೆಗಳನ್ನು ಸ್ಮರಿಸಿದರು.
ಇದನ್ನೂ ಓದಿ: ನವೆಂಬರ್ 1 ರಿಂದ ವಿವಿ ಸಾಗರದಲ್ಲಿ ಬೋಟಿಂಗ್ ಸೌಲಭ್ಯ: ಸಚಿವ
ಸಶಸ್ತ್ರ ಮೀಸಲು ಪಡೆ , ನಾಗರೀಕ ಪೊಲೀಸ್, ಗೃಹ ರಕ್ಷಕ , ಅಬಕಾರಿ , ಅರಣ್ಯ ಇಲಾಖೆ ತುಕಡಿಗಳು ಎನ್ಸಿಸಿ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ತಂಡ, ಪೊಲೀಸ್ ಬ್ಯಾಂಡ್ ಸ್ವಾತಂತ್ರ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ನಂತರ ನಡೆದ ಸಾಂಸ್ಕೃತಿಕ(Independence Day) ಕಾರ್ಯಕ್ರಮದಲ್ಲಿ ಕೋಟೆ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ವಿದ್ಯಾರ್ಥಿಗಳು ಪಹಲ್ಗಾಮ್ ಉಗ್ರರ ದಾಳಿ ಹಾಗೂ ಇದಕ್ಕಾಗಿ ಪ್ರತ್ಯುತ್ತರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಚರಣೆ ಕುರಿತ ನೃತ್ಯ ರೂಪಕ ಪ್ರಸ್ತುತ ಪಡಿಸಿದರು. ಎಸ್.ಜೆ.ಎಂ.ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಹರ್ ಘರ್ ತಿರಂಗಾ ನೃತ್ಯ ಪ್ರದರ್ಶಿಸಿದರು. ಡಿ.ಎಸ್.ಹಳ್ಳಿಯ ಜ್ಞಾನ ಪೂರ್ಣ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ರೈತರು, ವಿಜ್ಞಾನಿಗಳು,ಯೋಧರು, ಕ್ರೀಡಾಪಟುಗಳು ಕೊಡುಗೆಯ ಮಹತ್ವ ಸಾರುವ ನೃತ್ಯ ರೂಪಕ ಪ್ರಸ್ತುತ ಪಡಿಸಿದರು.
ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಭಾಗವಹಿಸಿದ್ದರು. ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಮಹಿಳೆಯರ ಪ್ರತಿಭಟನೆ
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್. ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ಪೀರ್, ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತ ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ನಗರ ಸಭೆ ಆಯುಕ್ತೆ ರೇಣುಕಾ.ಎಂ, ತಹಶೀಲ್ದಾರ್ ಗೋವಿಂದರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
