
Chitradurga news | nammajana.com|18-11-2024
ನಮ್ಮಜನ.ಕಾಂ, ಚಿತ್ರದುರ್ಗ: ಕಲಿ ಹಾಗೂ ಕವಿಯಾಗಿ ತಮ್ಮ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು ಸಂತಶ್ರೇಷ್ಠ ಭಕ್ತ ಕನಕದಾಸರು. ನೆಲಮೂಲ (Kanaka Jayanti) ಸಂಸ್ಕøತಿಯ ಸತ್ವ ಹಾಗೂ ಸಾರವನ್ನು ಹೀರಿ ಬೆಳೆದ ಅಪ್ಪಟ ದೇಸಿಯ ಚಿಂತನೆ ಉಳ್ಳ ಕೀರ್ತನಕಾರರು. ಮುಖ್ಯವಾಗಿ ಮಾನವೀಯ ತುಡಿತ ಮಿಡಿತಗಳೊಂದಿಗೆ ತಮ್ಮ ಕೀರ್ತನೆಗಳನ್ನು ರಚಿಸಿದರು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ಹಾಗೂ ಜಿಲ್ಲಾ ಕುರುಬ ಸಮಾಜದ ಸಹಯೋಗದಲ್ಲಿ ಆಯೋಜಿಸಲಾದ ಸಂತಶ್ರೇಷ್ಟ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಾಸ ಶ್ರೇಷ್ಟ ಕನಕದಾಸರು ಕಳೆವರ್ಗದಲ್ಲಿ ಜನಿಸಿದರೂ, ಎಲ್ಲಾ ಸಮಾಜದ ನಾಯಕರಾಗಿ ಉದಯಿಸಿದರು. ನಾಡಿನಲ್ಲಿ ಜ್ಯಾತ್ಯಾತೀತ ತತ್ವ ಪಸರಿಸಲು ಕನಕದಾಸರು ಕಾರಣೀಭೂತರಾಗಿದ್ದಾರೆ. ಕೀರ್ತನೆಗಳ ಮೂಲಕ ಅಸಮಾನತೆ ಹಾಗೂ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದರು.
ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಕುಲೀನ ವರ್ಗದವರು ತಾವು ಎಂದು ಬೀಗುತ್ತಿದ್ದವರನೇ ನೇರವಾಗಿ ಪ್ರಶ್ನಿಸಿದರು. ಕನಕದಾಸರು ರಚಿಸಿದ ಕೀರ್ತನೆಗಳು ಒಂದು ವಿಶಿಷ್ಟ ಪ್ರಯೋಗ. ಅವರು ಕನ್ನಡ ಸಂಗೀತ ಲೋಕಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ.
ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದರು. ಈ ಕೀರ್ತನೆಗಳು ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯಗಳ ಬಗ್ಗೆ (Kanaka Jayanti) ಮಾತನಾಡುತ್ತವೆ ಮತ್ತು ಕೋಮು ಸೌಹಾರ್ದದ ಭಾವನೆಯನ್ನು ಎತ್ತಿ ತೋರಿಸುತ್ತವೆ ಎಂದರು.
ಕನಕದಾಸರ ಜಯಂತಿ ಎಂದರೆ ಕನ್ನಡ ಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕೆ ವಿಶೇಷವಾದ ಕೃತಜ್ಞತೆ ಸಲ್ಲಿಸುವ ದಿನ. ಕನಕದಾಸರ ಜೀವನ, ಸಂದೇಶ, ಮಾನವ ಕುಲದ ಬದುಕಿಗೆ ಸಂಜೀವಿನಿ ದ್ರವ್ಯ ಇದ್ದಂತೆ. ಕನಕದಾಸರಿಗೆ ಅಧಿಕಾರ, ಶ್ರೀಮಂತಿಕೆ, ಸಂಸಾರ, 78 ಗ್ರಾಮಗಳ ಒಡೆತನವಿತ್ತು, ಅದೆಲ್ಲವನ್ನು ಮೀರಿ ಸಹಜ ಸರಳ ಬದುಕು ನಡೆದು ತೋರಿಸಿದವರು ಕನಕದಾಸರು. ಕನ್ನಡ ಪರಂಪರೆಯ ಜಾತ್ಯಾತೀತ ಮತ್ತು ಮಾನವೀಯ ಮೌಲ್ಯಗಳ ನಿಟ್ಟಿನಲ್ಲಿ ಕನಕದಾಸರು ನಡೆಸಿದ ಏಕಾಂಗಿತನದ ಹೋರಾಟ ನಿಜಕ್ಕೂ ಶ್ಲಾಘನೀಯ ಎಂದು ಸಚಿವ ಡಿ.ಸುಧಾಕರ್ ಬಣ್ಣಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಕ್ಕೆ ಸನ್ಮಾರ್ಗ ತೋರಿದ ಮಹನೀಯರನ್ನು ಜಾತಿಗೆ ಸೀಮಿತಗೊಳಿಸಬಾರದು. ಆರಂಭದಲ್ಲಿ ವಿಜಯನಗರ ಸೇನೆಯಲ್ಲಿ ದಂಡನಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ತಿಮ್ಮಪ್ಪ, ತನ್ನ ಹೊಲದಲ್ಲಿ ಸಿಕ್ಕ ಬಂಗಾರವನ್ನು ಜನರಿಗೆ ಹಂಚಿ ಕನಕ ಎಂದು ಪ್ರಸಿದ್ಧರಾದರು. ಯುದ್ದದ ಬಗ್ಗೆ ವೈರಾಗ್ಯ ಹೊಂದಿದ ಕನಕ, ಸಮಾಜ ಸುಧಾರಣೆ ಹಾಗೂ ಆಧ್ಯಾತ್ಮದ ಕಡೆ (Kanaka Jayanti) ಮುಖಮಾಡಿ ಸಂತಶ್ರೇಷ್ಠ ಕನಕದಾಸ ಎನಿಸಿದರು.
ಸಮಾಜದ ಕೆಳ ವರ್ಗದ ಧ್ವನಿಯಾಗಿದ್ದ ಕನಕದಾಸರ, ತಮ್ಮ ಕೀರ್ತನೆ ಹಾಗೂ ಕೃತಿಗಳಲ್ಲಿ ಜಾತಿ ಹಾಗೂ ಕುಲ ಶ್ರೇಷ್ಠತೆ ಖಂಡಿಸಿದರು. ತಮ್ಮ ಸಾಹಿತ್ಯದಲ್ಲಿ ಸರ್ವರಿಗೂ ಸಮಪಾಲು ಹಾಗೂ ಸಮಬಾಳು ತತ್ವ ಪ್ರತಿಪಾದಿಸಿದರು. ನಾಡಿನ ಎಲ್ಲ ಜನರ ಮನ ಮನೆಗಳಲ್ಲಿ ಕನಕರ ತತ್ವಾದರ್ಶಗಳ ಜ್ಯೋತಿ ಬೆಳಗಬೇಕು ಎಂದರು.
ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಕೆ.ರವಿ, ಕನ್ನಡ ನಾಡಿನಲ್ಲೆಡೆ ಉತ್ಸಾಹ ಹಾಗೂ ವಿಜೃಂಭಣೆಯಿಂದ ಕನಕ ಜಯಂತಿ ಆಚರಿಸಲಾಗುತ್ತದೆ. ಕನಕದಾಸರ ಮುಂಡಿಗೆಗಳನ್ನು ಅರ್ಥ ಮಾಡಲು ಅಳವಾದ ಅಧ್ಯಯನ ಬೇಕು. ಕನಕನನ್ನು ಕೆಣಕಿ ಬೇಡ, ಕೆಣಕಿ ತಿಣುಕ ಬೇಡ ಎಂಬ ನಾಣ್ನುಡಿ ಅವರ ಜ್ಞಾನದ ಪ್ರಬುದ್ಧತೆ ತೋರಿಸುತ್ತದೆ. ಶ್ರೇಣಿಕೃತ ವರ್ಗ ಸಂಘರ್ಷದ ಸಮಾಜದಲ್ಲಿ ಕುಲೀನ ಕುಲ ವ್ಯವಸ್ಥೆ ಪ್ರಶ್ನಿಸಿದರು.
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಎಲ್ಲ ಜನರ ಬದುಕಿನ ವಾಸ್ತವ ತೆರೆದಿಟ್ಟರು. ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಕನಕ ಅಧ್ಯಯನ ಪೀಠ ತೆರೆಯಲಾಗಿದೆ. ಅವರ ಕೃತಿಗಳ ಭಾಷಾಂತರ ವಿಭಾಗಗಳಿಂದ ತರ್ಜುಮೆ (Kanaka Jayanti) ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹೊರತಂದಿರುವ ಎಚ್.ದಂಡಪ್ಪ ಸಂಪಾದಕತ್ವದ “ಕವಿ ಕನಕದಾಸರು” ಕೃತಿ ಬಿಡಿಗಡೆ ಮಾಡಲಾಯಿತು.
ಜಿಲ್ಲಾ ಕುರುಬರ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕನಕಶ್ರೀ ಪ್ರಶಸ್ತಿಗೆ ಭಾಜನರಾದವರ ವಿವರ:
ಸಮಾಜ ಸೇವಕರಾದ ಎಸ್.ಷಣ್ಮುಖಪ್ಪ, ಎಂ.ತಿಪ್ಪೇಸ್ವಾಮಿ, ಕೆ.ತಿಪ್ಪೆಸ್ವಾಮಿ, ಎಂ.ವಿ.ಮಾಲತೇಶ್, ಪರುಶುರಾಮ, ವೈದ್ಯರಾದ ಡಾ.ಈ.ಸತೀಶ, ಡಾ.ರಶ್ಮಿ.ಡಿ.ಮಲ್ಲಪ್ಪ, ಕೃಷಿಕರಾದ ಬಿ.ಜಗನ್ನಾಥ್, ರೇಣುಕಾ ರಾಜ್, ಸಾಹಿತಿ ಸುಭಾ ಚಂದ್ರ ದೇವರಗುಡ್ಡ, ಶಿಕ್ಷಣ ಕ್ಷೇತ್ರ ಯೋಗೀಶ್ ಸಹ್ಯಾದ್ರಿ, ಆಡಳಿತ ಕ್ಷೇತ್ರದಲ್ಲಿ ರೂಪಾ ಕುಮಾರಿ, ಪೊಲೀಸ್ ಅಧಿಕಾರಿ ಸುರೇಶ್.ಪಿ, ಪತ್ರಕರ್ತ ಮಾಲತೇಶ್ ಅರಸ್, ಕಾರ್ಮಿಕ ಕ್ಷೇತ್ರದ ತಿಪ್ಪೇಸ್ವಾಮಿ.ಆರ್ ಕನಕಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಕೋಟೆ ಬಳಿ ಒತ್ತುವರಿ ಆಗಿಲ್ಲ, ಜಮೀನಿನ ದಾಖಲೆ ಬಿಡುಗಡೆ ಮಾಡಿದ ರಾಮಮೂರ್ತಿ | Fort encroachment case
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್ ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗಾರಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್ಪೀರ್, ಜಿಲ್ಲಾ ಗ್ಯಾರಂಟೆ ಯೋಜನೆಗಳ ಅಧ್ಯಕ್ಷ ಶಿವಣ್ಣ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ ಇಓ ರವಿಕುಮಾರ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ನಗರಸಭೆ ಸದಸ್ಯ ಪಿ.ಕೆ. ಮೀನಾಕ್ಷಮ್ಮ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಕಾರ್ಯದರ್ಶಿ ಬಿ.ಟಿ.ಜಗದೀಶ್, ತಾಲ್ಲೂಕು ಅಧ್ಯಕ್ಷ ಕೆ.ಓಂಕಾರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಇದ್ದರು. ಆಯಿತೋಳು ವಿರೂಪಾಕ್ಷಪ್ಪ ಅವರ ತಂಡ ಕನಕದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು.
ಇದನ್ನೂ ಓದಿ: Adike Rate | 18 ನವೆಂಬರ್ 2024 | ಚನ್ನಗಿರಿ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್