
Chitradurga News | Nammajana.com | 22-4-2024
ನಮ್ಮಜನ.ಕಾಂ.ಹೊಸದುರ್ಗ: ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಯೋತ್ಪಾದನೆ ಚಟುವಟಿಕೆಗಳು ಬಹಳಷ್ಟು ವಿರಳವಾಗಿವೆ. ಪ್ರಧಾನಿ ನರೇಂದ್ರ ಮೋದಿಜಿ, ಗೃಹ ಸಚಿವ ಅಮಿತ್ ಶಾ ಭಯೋತ್ಪಾದಕರನ್ನು ಎಡೆಮುರಿ ಕಟ್ಟುತ್ತಿದ್ದಾರೆ. ಸಂಪೂರ್ಣವಾಗಿ ಭಯೋತ್ಪಾದನೆ ಮುಕ್ತ ದೇಶವನ್ನಾಗಿ ಮಾಡಲು ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಎಂದು ಬಿಜೆಪಿ ಮುಖಂಡ ಸದ್ಗುರು ಪ್ರದೀಪ್ ಹೇಳಿದರು.
ತಾಲೂಕಿನ ನಾಕೀಕೆರೆ, ಕಿಟ್ಟದಹಳ್ಳಿ, ಶೀರನಕಟ್ಟೆ, ದಾಸಜ್ಜನಹಟ್ಟಿ, ಲಕ್ಕಿಹಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಸೋಮವಾರ ಮತಯಾಚನೆ ಮಾಡಿ ಅವರು ಮಾತನಾಡಿದರು.
ನರೇಂದ್ರ ಮೋದಿಜಿ ಅವರು ದೇಶದ ಪ್ರಧಾನ ಮಂತ್ರಿ ಆದಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶ ಬಹಳ ಹೆಸರಾಗಿದೆ. ಭಾರತ ರಾಷ್ಟ್ರವನ್ನು ಮತ್ತಷ್ಟು ಸಶಕ್ತ, ಸದೃಢ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಮೋದಿಜಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು.
ಆರ್ಥಿಕತೆಯಲ್ಲಿ ದೇಶ 5ನೇ ಸ್ಥಾನಕ್ಕೆ ಬಂದಿದೆ. ಮತ್ತೊಮ್ಮೆ ಮೋದಿಜಿ ಪ್ರಧಾನ ಮಂತ್ರಿಯಾದರೆ, ಮತ್ತಷ್ಟು ಪ್ರಗತಿ ಕಾಣಲಿದ್ದೇವೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ದೇಶದ 140 ಕೋಟಿ ಜನರಿಗೆ ಉಚಿತವಾಗಿ ವ್ಯಾಕ್ಸಿನೇಷನ್ ನೀಡಿದರು. ಇವರ ಸ್ಥಾನದಲ್ಲಿ ಬೇರೆ ಯಾರೇ ಇದ್ದಿದ್ದರೂ, ದೇಶದ ಜನರು ಯಾವ ಸ್ಥಿತಿಯಲ್ಲಿ ಇರುತ್ತಿದ್ದರು ಎಂಬುದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸ್ವಾಮಿ ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ಇನ್ನಿತರ ಮಹಾತ್ಮರ ಚಿಂತನೆ ಮತ್ತು ಆದರ್ಶನಗಳನ್ನು ಮೈಗೂಡಿಸಿಕೊಂಡು ನರೇಂದ್ರ ಮೋದಿಜಿ ಅವರು ಸರ್ವ ಜನರನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಮುನ್ನೆಡೆಯುತ್ತಿದ್ದಾರೆ. ಇಂತಹ ನಾಯಕತ್ವವನ್ನು ಕಳೆದುಕೊಂಡರೆ, ದೇಶ ಬಹಳಷ್ಟು ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ವೇಳೆ ಬಿಜೆಪಿ ಮುಖಂಡರಾದ ಗೂಳಿಹಟ್ಟಿ ಕೃಷ್ಣಮೂರ್ತಿ, ಅನುಸೂಯಮ್ಮ, ಬೋಕಿಕೆರೆ ನಾಗರಾಜ್ ಮತ್ತು ಕಡವಿಗೆರೆ ದೇವರಾಜ್ ಸೇರಿದಂತೆ ಇತರ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.
