
Chitradurga news|nammajana.com|28-03-2025
ವರ್ಷದಲ್ಲಿ 38.74 ಲಕ್ಷ ಸಂಗ್ರಹ; ನಂತರದ ಸ್ಥಾನದಲ್ಲಿ ಹಾಲುರಾಮೇಶ್ವರಸ್ವಾಮಿ
ವಿಶೇಷ ವರದಿ:ಪಿ.ಟಿ.ಸಿದ್ಧೇಶ್ ಲಕ್ಕಿಹಳ್ಳಿ

ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ 72 ದೇವಾಲಯಗಳಿದ್ದು, ಇವುಗಳಲ್ಲಿ ಶ್ರೀರಾಂಪುರ ಹೋಬಳಿಯ ಗವಿರಂಗಾಪುರದ (Sri Gaviranganatha) ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಗವಿರಂಗನಾಥ ಸ್ವಾಮಿಯೇ ತಾಲೂಕಿನ ಅತ್ಯಂತ ಸಿರಿವಂತ ದೇವರಾಗಿದೆ.
ಪ್ರಸಕ್ತ ವರ್ಷ 2024-25ನೇ ಸಾಲಿನಲ್ಲಿ ಶ್ರೀ ಗವಿರಂಗನಾಥಸ್ವಾಮಿಗೆ ಹುಂಡಿ ಮತ್ತು ಕಾಣಿಕೆಯ ರೂಪದಲ್ಲಿ 38.74 ಲಕ್ಷ ರೂ.ಬಂದಿರುವುದು ಮುಜರಾಯಿ ಇಲಾಖೆಯ ದಾಖಲೆಗಳಿಂದ ತಿಳಿದು ಬಂದಿದೆ. ತಾಲೂಕಿನಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಪ್ರವರ್ಗ ಎ.ಬಿ ಮತ್ತು ಸಿ ಅಧಿಸೂಚಿತ ದೇವಾಲಯಗಳಿದ್ದು, ಶ್ರೀ ಗವಿರಂಗನಾಥಸ್ವಾಮಿ ದೇವಾಲಯವೂ ಪ್ರವರ್ಗ ‘ಎ’ ಅಡಿಯಲ್ಲಿ ಬರುತ್ತದೆ.
ಅತ್ಯಧಿಕ ಕಾಣಿಕೆ ಸಂಗ್ರಹದಲ್ಲಿ ಗವಿ ರಂಗನಾಥಸ್ವಾಮಿ ದೇವಾಲಯ ಪ್ರಥಮಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಹಾಲುರಾಮೇಶ್ವರ (7.ಲಕ್ಷ ರೂ) ದೇವಾಲಯವಿದೆ. ಮೂರನೇ ಸ್ಥಾನದಲ್ಲಿ ಮೈಲಾರಪುರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯವಿದ್ದು, ಇನ್ನುಳಿದಂತೆ ಆದಾಯದಲ್ಲಿ 70 (Sri Gaviranganatha) ದೇವಾಲಯಗಳು ಕ್ರಮಾಂಕದಲ್ಲಿ ಬರುತ್ತವೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಾಯ್ದೆ ಕಾಲಂ 25 ರನ್ವಯ’ಎ’ ಮತ್ತು ‘ಬಿ’ ವರ್ಗದ ಧಾರ್ಮಿಕ ಸಂಸ್ಥೆಗಳಲ್ಲಿ ಸ್ಥಳೀಯರನ್ನೊಳಗೊಂಡಂತೆ ಒಂಬತ್ತು ಸದಸ್ಯರಾಗಿ ವ್ಯವಸ್ಥಾಪನಾ ಸಮಿತಿಗಳಿದ್ದು, ಈ ಸಮಿತಿಗಳು ದೇವಾಲಯದ ವಾರ್ಷಿಕ ಆಯವ್ಯಯ, ಮೂಲಭೂತ ಸೌಕರ್ಯ ಸೇರಿದಂತೆ ಇತರ ವೆಚ್ಚಗಳಿಗಾಗಿ ಹಣವನ್ನು ಬಳಕೆ ಮಾಡಿಕೊಳ್ಳುತ್ತವೆ. ಅದರಂತೆಯೇ, ಶ್ರೀ ಗವಿರಂಗನಾಥಸ್ವಾಮಿ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು, ಮುಜರಾಯಿ ಇಲಾಖೆಯ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ.
ಗವಿರಂಗಸ್ವಾಮಿಗೆ ರಾಜ್ಯ ಮಾತ್ರವಲ್ಲದೇ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ನಾನಾ ರಾಜ್ಯಗಳ ಅಪಾರಭಕ್ತರ ಸಂಖ್ಯೆಯೇ ಹರಿದು ಬರುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ, ವಿಶೇಷ ಪೂಜಾಸೇವಾ ಕಾರ್ಯಗಳನ್ನು ನಡೆಸುವುದುಂಟು. ವೈಕುಂಠ ಏಕಾದಶಿ, ದಸರಾ ಹಾಗೂ ಇನ್ನಿತರ ಹಬ್ಬಗಳಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ಮತ್ತು ಸೇವಾಕಾರ್ಯಗಳು ನೆರವೇರುತ್ತವೆ. ರಥಸಪ್ತಮಿಯ ದಿನದಂದು ಸ್ವಾಮಿಯ ಅಪ್ಪಣೆಯ ಮೇರೆಗೆ 7 ವರ್ಷ ಅಥವಾ 9 ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಕ್ಷೇತ್ರದಲ್ಲಿ (Sri Gaviranganatha) ಗವಿರಂಗನಾಥಸ್ವಾಮಿಯ ಜೊತೆಗೆ ಶ್ರೀ ಲಕ್ಷ್ಮಿದೇವಿ, ಕೆಂಚರಾಯ ಮತ್ತು ಕಾಡರಾಯಸ್ವಾಮಿ ನೆಲೆಗೊಂಡಿದ್ದು, ಈ ದೇವಾಲಯಗಳಲ್ಲಿಯೂ ಕೂಡ ನಿತ್ಯವೂ ಪೂಜೆ ಮತ್ತು ಸೇವಾಕಾರ್ಯಗಳು ನಡೆಯುತ್ತಿವೆ’ ಎಂದು ಮುಖಂಡ ಕೃಷ್ಣಮೂರ್ತಿ ತಿಳಿಸಿದ್ದಾರೆ.
*ವಿಷ್ಣುವಿನ ಕೂರ್ಮಾವತಾರದ ಸ್ವಯಂಸ್ವಾಮಿ*
‘ಸುರರು ಮತ್ತು ಅಸುರರು ಸಮುದ್ರ ಮಂಥನ ಮಾಡಿದಾಗ ಶ್ರೀ ವಿಷ್ಣು ಕೂರ್ಮವತಾರ ತಾಳುತ್ತಾನೆ. ಅದೇ ಸ್ವಯಂ ಸ್ವಾಮಿ ಬಂದು ಗವಿರಂಗಾಪುರದ ಬೆಟ್ಟದ ಮೇಲೆ ಆಮೆಯ ಅವತಾರದಲ್ಲಿ ನೆಲೆಸಿದ್ದು, ಇದು ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿದೆ. ಕೂರ್ಮಾವತಾರದ ಮೂಲರೂಪದ ಸ್ವಾಮಿಯನ್ನು ಇಲ್ಲಿ ಬಿಟ್ಟರೆ, ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ಈ ಕ್ಷೇತ್ರದ ಮಹಿಮೆ ಮತ್ತು ಮಹತ್ವದ ಬಗ್ಗೆ ನಮ್ಮ ಗುರುಗಳು ನಮಗೆ ತಿಳಿಸಿದ್ದಾರೆ’ ಎಂದು ಗವಿರಂಗನಾಥಸ್ವಾಮಿ ಕ್ಷೇತ್ರದ ಕುರಿತು ಇತ್ತೀಚೆಗೆ, ಹೆಗ್ಗೆರೆ ಗ್ರಾಮಕ್ಕೆ ಭೇಟಿ ನೀಡಿದ್ದ ಧನಂಜಯ ಅಘೋರಿ ನಾಗಸಾಧು ಹೇಳಿದ್ದರು.
ಇದನ್ನೂ ಓದಿ: Hosadurga | ಯಮಧೂತರಂತೆ ಬಲಿಗಾಗಿ ಕಾಯುತ್ತಿರುವ ಅವೈಜ್ಙಾನಿಕ ಡಿವೈಡರ್ ಗಳು
ಭಕ್ತರ ಮಾತು
ಹೊಸದುರ್ಗ ತಾಲೂಕು ರಾಜ್ಯದಲ್ಲಿಯೇ ವಿಶಿಷ್ಟ ಮತ್ತು ವಿಶೇಷವಾಗಿದ್ದು, ನಮ್ಮಲ್ಲಿ ಪುರಾಣ ಪ್ರಸಿದ್ಧ ಮತ್ತು ಇತಿಹಾಸ ಪ್ರಸಿದ್ಧವಾದ ಕ್ಷೇತ್ರಗಳು ಸಾಕಷ್ಟಿವೆ. ವಿಷ್ಣುವಿನ ದಶಾವತಾರಗಳಲ್ಲಿ ಕೂರ್ಮವತಾರವೂ ಒಂದು. ಕೂರ್ಮವತಾರದ ಶ್ರೀ ಗವಿರಂಗನಾಥಸ್ವಾಮಿಯನ್ನು ಗವಿರಂಗಾಪುರದ ಬೆಟ್ಟದ ಮೇಲೆ ಬಿಟ್ಟರೆ, ಇನ್ನೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಇಂತಹವೊಂದು ಧಾರ್ಮಿಕ ಪುಣ್ಯಕ್ಷೇತ್ರ ಹೊಸದುರ್ಗ ತಾಲೂಕಿನಲ್ಲಿರುವುದು ಹೆಮ್ಮೆಯ ವಿಚಾರ. ಅಲ್ಲದೇ, ತಾಲೂಕಿನಲ್ಲಿಯೇ ಸಿರಿವಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸಂತಸದ ವಿಚಾರ. ಸ್ವಾಮಿಯ ದರ್ಶನ ಪಡೆಯಲು ರಾಜ್ಯ ಮಾತ್ರವಲ್ಲದೆ, ದೇಶದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹವೇ ಬರುತ್ತದೆ. ಇಲ್ಲಿಗೆ ಬಂದ ಭಕ್ತರಿಗೆ ಯಾವುದೇ (Sri Gaviranganatha) ಸಮಸ್ಯೆಯಾಗದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರೆಲ್ಲರ ಸಹಕಾರದಿಂದಾಗಿ ಕ್ಷೇತ್ರ ಮತ್ತಷ್ಟು ಪ್ರಗತಿಹೊಂದಬೇಕಿದೆ.
ಶಂಕರಪ್ಪ ಹೆಗ್ಗೆರೆ
ದೇವಾಲಯದ ಭಕ್ತ.