Chitradurga news | nammajana.com | 20-07-2025
ನಮ್ಮಜನ.ಕಾಂ ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ(VV sagara) ಜಲಾಶಯದ ಎಡ ಮತ್ತು ಬಲನಾಲೆಗಳ ಆಸುಪಾಸಿನಲ್ಲಿ ಜಮೀನು, ತೋಟ ಹೊಂದಿರುವ ಕೆಲವರು ನಾಲೆಯ ನೀರಿಗೆ ಕನ್ನ ಹಾಕುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಘಟಕದ ಅಧ್ಯಕ್ಷ ಆಲೂರು ಸಿದ್ದರಾಮಣ್ಣ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮದುವೆಯ ಚಿಂತೆಯಲ್ಲಿ ಮನನೊಂದು ಹೋಂ ಗಾರ್ಡ್ ಆತ್ಮಹತ್ಯೆ
ಕೆಲವು ಬಲಾಡ್ಯರು ಹಣ ಮತ್ತು ರಾಜಕೀಯ ಪ್ರಭಾವ ಬಳಸಿ, ಯಾವುದೇ ತೆರಿಗೆ ಪಾವತಿಸದೆ 6ರಿಂದ 10 ಇಂಚು ಗಾತ್ರದ ಪೈಪ್ ಅಳವಡಿಸಿ ನಾಲೆಯಿಂದ ನೇರವಾಗಿ ನೀರು ಎತ್ತಿಕೊಳ್ಳುತ್ತಿದ್ದಾರೆ. ಇದರಿಂದ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಸಿಗದಂತಾಗಿದೆ’ ಎಂದು ದೂರಿದ್ದಾರೆ.
ಸಾಮಾನ್ಯವಾಗಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ 30 ದಿನ ನೀರು ಹರಿಸುವುದು ವಾಡಿಕೆ. ಆದರೆ ಫೆಬ್ರುವರಿಯಲ್ಲಿ 42 ದಿನ ನೀರು ಹರಿಸಲಾಗಿದೆ. ಇದಕ್ಕೆ ಕಾರಣ ನಾಲೆಗಳಲ್ಲಿ ಹೂಳು, ಗಿಡಗಂಟಿ ಬೆಳೆದಿರುವುದು. ಪ್ರಮುಖವಾಗಿ ನೀರನ್ನು ಅಕ್ರಮವಾಗಿ ಬಳಸುತ್ತಿರುವುದು’ ಎಂದುಆರೋಪಿಸಿದ್ದಾರೆ.
ಮುಂಚೆಯಂತೆ ಚೌಡಿಗಳು ಪ್ರತಿ ತೂಬಿನ(VV sagara) ಹತ್ತಿರ ಕುಳಿತು ರೈತರಿಗೆ ನೀರು ಹರಿಸುತ್ತಿಲ್ಲ. ನಾಲೆಗಳಿಂದ ನೀರು ಕನ್ನಾ ಹಾಕುತ್ತಿರುವ ಫೋಟೊ, ವಿಡಿಯೊ ಕೊಟ್ಟಿದ್ದರೂ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ: ದುರ್ಗದ ಸಿರಿ ಹೋಟೆಲ್ ನಲ್ಲಿ ಅಕ್ರಮ ಇಸ್ಪೀಟ್ ದಂಧೆ, 32 ಜೂಜುಕೋರರ ಬಂಧನ
ನೀರಿನ ನಿರ್ವಹಣೆ ಸರಿ ಇಲ್ಲದ ಕಾರಣಕ್ಕೆ ಬಹಳಷ್ಟು ಪ್ರಮಾಣದ ನೀರು ವೇದಾವತಿ ನದಿಗೆ ಸೇರುತ್ತಿದೆ. 2017ರಲ್ಲಿ ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದನ್ನು ಎಲ್ಲರೂ ಮರೆತಂತಿದೆ. ಮತ್ತೊಮ್ಮೆ ಅಂತಹ ಪರಿಸ್ಥಿತಿ ಬರಬಾರದು ಎಂದಾದರೆ ನೀರಿನ ಕನ್ನ ತಪ್ಪಿಸಬೇಕು. ನಾಲೆಗಳನ್ನು ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
